-->

Akshaya tritiya Importance - Kannada article share - ಅಕ್ಷಯ ತೃತೀಯ

'ಅಕ್ಷಯ ತೃತೀಯ'. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಅವುಗಳೆಂದರೆ: -

1) ನಾಲ್ಕು ಯುಗಗಳಾದ ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳಲ್ಲಿ, ಸತ್ಯ ಅಥವಾ ಕೃತಯುಗ ಪ್ರಾರಂಭವಾಗಿದ್ದು 'ಅಕ್ಷಯ ತೃತೀಯ' ದಿನದಂದು.

2) ವೇದವ್ಯಾಸರು ಮಹಾಭಾರತವನ್ನು ರಚಿಸುವ ಸಂದರ್ಭದಲ್ಲಿ ಅವರಿಗೆ ಸಹಾಯಕನಾಗಿ ಗಣೇಶನು ನೆರವಾಗಿದ್ದು 'ಅಕ್ಷಯ ತೃತೀಯ' ದಿನದಂದು.

3) ಭಗೀರಥನ ಪ್ರಯತ್ನದಿಂದ ಗಂಗಾವತರಣವಾಗಿದ್ದು (ಶಿವನ ಜಟೆಯಿಂದ ಗಂಗೆ ಭೂಮಿಗೆ ಇಳಿದದ್ದು) 'ಅಕ್ಷಯ ತೃತೀಯ' ದಿನದಂದು.

4) ದಶಾವತಾರಗಳಲ್ಲಿ ಒಂದಾದ 'ಪರಶುರಾಮಾವತಾರ' ಪ್ರಾರಂಭವಾಗಿದ್ದು (ಹುಟ್ಟಿದ ದಿನ) 'ಅಕ್ಷಯ ತೃತೀಯ' ದಿನದಂದು.

5) ಸಂಪತ್ತಿನ ಒಡೆಯ ಮತ್ತು ಯಕ್ಷರ ರಾಜ 'ಕುಬೇರ'ನಿಗೆ ನಿಧಿ/ಸಂಪತ್ತು ದೊರೆತದ್ದು 'ಅಕ್ಷಯ ತೃತೀಯ' ದಿನದಂದು.

6) ಕುಚೇಲನಿಗೆ ಗೆಳೆಯ ಶ್ರೀಕೃಷ್ಣನಿಂದ ಅನುಗ್ರಹ ಪ್ರಾಪ್ತಿಯಾಗಿದ್ದು 'ಅಕ್ಷಯ ತೃತೀಯ' ದಿನದಂದು.

7) ಅಮೃತ ಪ್ರಾಪ್ತಿಗಾಗಿ ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಂಥನ ಮಾಡುತ್ತಿದ್ದ ವೇಳೆ ಲಕ್ಷ್ಮೀ ಹುಟ್ಟಿದ್ದು 'ಅಕ್ಷಯ ತೃತೀಯ' ದಿನದಂದು.

8) ದುಶ್ಯಾಸನನು ದ್ರೌಪದಿಯ ವಸ್ತ್ರಾಪಹರಣ ಮಾಡುತ್ತಿದ್ದ ವೇಳೆ ಶ್ರೀಕೃಷ್ಣನು ಆಕೆಯ ಮಾನವನ್ನು (ಸೀರೆಯನ್ನು ನೀಡುವುದರ ಮೂಲಕ) ಕಾಪಾಡಿದ್ದು 'ಅಕ್ಷಯ ತೃತೀಯ' ದಿನದಂದು.

ಅಕ್ಷಯ ತೃತೀಯ ದಿನದ ಬಗ್ಗೆ ಇವಿಷ್ಟು ಪುರಾಣದ ಸಂಗತಿಗಳಾದರೆ, ನಾವಿರುವ ಕಲಿಯುಗದಲ್ಲಿ ಈ ಕೆಳಗಿನ ಸಂಗತಿಗಳು ಈ ರೀತಿ ಇವೆ:

1) ಆಂಧ್ರಪ್ರದೇಶದ ವಿಶಾಖಾಪಟ್ಟಣಂ ಬಳಿ ಇರುವ ಸಿಂಹಾದ್ರಿ ಅಥವಾ ಸಿಂಹಾಚಲಂ ದೇವಾಲಯದಲ್ಲಿ (ಹಿರಣ್ಯಕಶಿಪುವನ್ನು ಮಹಾವಿಷ್ಣುವು 'ನರಸಿಂಹಾವತಾರ'ದಲ್ಲಿ ಸಂಹರಿಸಿದ ಸ್ಥಳ) ವರ್ಷದ 364 ದಿನಗಳ ಕಾಲವೂ ಮೂಲದೇವರಾದ ನರಸಿಂಹಸ್ವಾಮಿಯ ಮುಖವನ್ನು ಚಂದನದಿಂದ ಮರೆಮಾಡಿರುತ್ತಾರೆ. ಕಾರಣ ನರಸಿಂಹಸ್ವಾಮಿಯ ಅತಿ ಉಗ್ರಸ್ವರೂಪ ಮೂರ್ತಿಯನ್ನು ನೋಡಲಾಗುವುದಿಲ್ಲ. ಆ.ದ.ರೆ.... 'ಅಕ್ಷಯ ತೃತೀಯ' ದಿನದಂದು ಮಾತ್ರ ದೇವರ ಮುಖವನ್ನು ಚಂದನದಿಂದ ಮರೆಮಾಚದೇ ನೈಜ ದರ್ಶಕಕ್ಕೆ ಅವಕಾಶವಿರುತ್ತದೆ. ಹೀಗಾಗಿ ಅಂದು ಬಹುತೇಕ ಆಂಧ್ರಪ್ರದೇಶ ಮತ್ತು ಇನ್ನೀತರ ಭಾಗದ ಜನರು ಅಲ್ಲಿ ನೆರೆದಿರುತ್ತಾರೆ.

2) 'ಅಕ್ಷಯ ತೃತೀಯ' ದಿನದಂದು ತಮ್ಮ ಸಾಮರ್ಥ್ಯಾನುಸಾರ ಹೋಮವನ್ನು ನೇರವೇರಿಸಿದ್ದಲ್ಲಿ ಅಥವಾ ಸಾರ್ವಜನಿಕವಾಗಿ ಹೋಮ ಆಯೋಜಿಸಿದ ಸ್ಥಳದಲ್ಲಿ ಭಾಗವಹಿಸಿದರೆ "ಅಶ್ವಮೇಘ" ಯಾಗ ಮಾಡಿದ ಪುಣ್ಯಪ್ರಾಪ್ತಿಯಾಗುತ್ತದೆ.

3) 'ಅಕ್ಷಯ ತೃತೀಯ' ದಿನದಂದು ತಮ್ಮ ಶಕ್ತ್ಯಾನುಸಾರ ಯಾವುದೇ ಹೊಸ ವಸ್ತುಗಳನ್ನು ಖರೀದಿಸಬಹುದಾಗಿದೆ. (ಧನಿಕರು ಮತ್ತು ಅನುಕೂಲಸ್ಥರು ಚಿನ್ನವನ್ನು ಖರೀದಿಸಬಹುದು, ಆದರೆ ಕಡ್ಡಯವಲ್ಲ) ಏನೂ ಬೇಡವೆಂದರೂ ಅಡಿಗೆಗೆ ಬಳಸುವ ಉಪ್ಪಿನ ಪ್ಯಾಕೇಟನ್ನಾದರೂ ಖರೀದಿಸಿದರೆ ಚಿನ್ನವನ್ನು ಖರೀದಿಸಿದ ಫಲವೇ ಪ್ರಾಪ್ತಿಯಾಗುತ್ತದೆ.

4) 'ಅಕ್ಷಯ ತೃತೀಯ' ದಿನದ ಇಡೀ ದಿನದ ಪ್ರತಿಯೊಂದು ಘಳಿಗೆಯೂ ಶುಭ ಮುಹೂರ್ತದ್ದೇ ಆಗಿರುತ್ತದೆ. ಅಂದು ಮಾತ್ರ ಯಾವುದೇ ರಾಹುಕಾಲ, ಗುಳಿಕಕಾಲ ಅಥವಾ ಇನ್ಯಾವುದೇ ಅಶುಭಕಾಲದ ಮಹತ್ವ ಇರುವುದಿಲ್ಲ.

ಈ ಮೇಲ್ಕಂಡ ವಿಷಯಗಳು 'ಅಕ್ಷಯ ತೃತೀಯ' ದಿನದ' ಮಹತ್ವವನ್ನು ಪಡೆದುಕೊಂಡಿದೆ. ಅದು ಬಿಟ್ಟು ಕೇವಲ ಚಿನ್ನವನ್ನು ಖರೀದಿಸಿದರೇ ಮಾತ್ರ 'ಅಕ್ಷಯ ತೃತೀಯ' ದಿನದ ಫಲಪ್ರಾಪ್ತಿ ಎಂದು ನಂಬುವುದು ಶುದ್ಧ ಮೂರ್ಖತನ ಅಥವಾ ಹುಚ್ಚುತನ.  ಜನರ ಈ ಅಂಧಶ್ರದ್ಧೆಯ ಮನ:ಸ್ಥಿತಿಯನ್ನು ಚಿನ್ನದ ವ್ಯಾಪಾರಿಗಳು ಯಥೇಚ್ಛವಾಗಿ ಲಾಭವಾಗಿ ಪಡೆಯುತ್ತಿದ್ದಾರಷ್ಟೆ
–>